yakshadhruvapatlafoundation.org

ನ್ಯೂ ಪನ್ವೇಲ್: ಹಣ ಸರ್ವ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಎಲ್ಲರೂ ಹಣ ಸಂಪಾದಿಸುತ್ತಾರೆ. ಆದರೆ ಸಂಪಾದಿಸಿದ ಹಣದಿಂದ ಸ್ವಲ್ಪ ಅಂಶವನ್ನು ದಾನ, ಧರ್ಮದ ರೂಪದಲ್ಲಿ ವಿನಿಯೋಗಿಸುವವರ ಸಂಖ್ಯೆ ಮಾತ್ರ ಬಹಳ ವಿರಳ. ಸಮಾಜದಲ್ಲಿ ನಾವು ಕೂಡಿಟ್ಟ ಹಣದಿಂದ ಗುರುತಿಸಲ್ಪಡುವುದಲ್ಲ, ಸಮಾಜಮುಖಿ ಕಾರ್ಯಗಳಿಂದ ಗುರುತಿಸಲ್ಪಡಬೇಕು. ನಮ್ಮ ಮಕ್ಕಳಿಗೆ ಆಸ್ತಿ ಮಾಡಿಡುವ ಬದಲು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿರಿಸಿಕೊಂಡು ಬೆಳೆಸುವಂತರಾಗಬೇಕು, ಕೇವಲ ಶ್ರೀಮಂತರಾಗಿದ್ದರೆ ಸಾಲದು. ಹೃದಯ ಶ್ರೀಮಂತಿಕೆ ನಮ್ಮಲ್ಲಿರಬೇಕು. ಇಂತಹ ಎಲ್ಲಾ ಗುಣವನ್ನು ಮೈಗೂಡಿಸಿಕೊಂಡಿರುವ ದಂಪತಿಗಳಲ್ಲಿ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿ ದಂಪತಿ ಎನ್ನಲು ಅಭಿಮಾನವಾಗುತ್ತಿದೆ.

ಮುಂಬಯಿಯಲ್ಲಾಗಲಿ, ತವರೂರಲ್ಲಾಗಲಿ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಇನ್ನು ಯಾವುದೇ ಸಮಾಜಪರ ಕಾರ್ಯವಿರಲಿ ಅಲ್ಲಿ ಸಹಾಯ, ಸಹಕಾರವನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿರುವ ಉತ್ತಮ ಗುಣ ಅವರಲ್ಲಿ ಇದೆ. ಅದರಲ್ಲೂ ಯಕ್ಷಗಾನ ಕಲೆಗೆ ವಿಶೇಷವಾಗಿ ಪ್ರೋತ್ಸಾಹವನ್ನು ನೀಡುತ್ತಾ ಬಂದವರಿದ್ದಾರೆ. ಕಳೆದ ಮೂರು ವರ್ಷಗಳಿಂದ ನಮ್ಮ ಮೇಳಕ್ಕೆ ಮತ್ತು ನಿರಂತರ ಯಕ್ಷಗಾನ ಕಲೆಗೆ ಈ ದಂಪತಿಗಳಿಂದ ಸಂದ ಕೊಡುಗೆ ಅಪಾರವಾಗಿದೆ.

ಸಂತೋಷ್ ಶೆಟ್ಟಿಯವರಂತೆ ಅವರ ಪತ್ನಿ ಶ್ವೇತಾ ಶೆಟ್ಟಿ ಕೂಡಾ ಕಲಾವಿದರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಾ, ಪತಿಗೆ ತಕ್ಕ ಸತಿಯಾಗಿ, ಆದರ್ಶ ದಂಪತಿಯಾಗಿ ಗುರುತಿಸಿಕೊಂಡವರಿದ್ದಾರೆ. ಅವರಿಗೆ ಮತ್ತು ಅವರ ಪರಿವಾರದ ಎಲ್ಲಾ ಸದಸ್ಯರಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಹಾಗೇ ದುರ್ಗಾ ಮಾತೆಯ ಅನುಗ್ರಹವಿರಲಿ, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರುವಂತೆ ಆಶೀರ್ವದಿಸಲಿ ಎಂದು ಯಕ್ಷಧ್ರುವ ಪಟ್ಟ ಫೌಂಡೇಶನ್‌ನ ರೂವಾರಿ ನಾಮಾಂಕಿತ ಭಾಗವತ ಯಕ್ಷಧ್ರುವ ಪಟ್ಟ ಸತೀಶ್ ಶೆಟ್ಟಿ ಅಭಿಮಾನದ ನುಡಿಗಳೊಂದಿಗೆ ಶುಭ ಹಾರೈಸಿದರು.

ಅವರು ಅ. 21 ರ ಸೋಮವಾರ ರಾತ್ರಿ ನ್ಯೂ ಪನ್ವೇಲ್ ಮಾಥೇರನ್ ರೋಡ್, ರಾಜೀವ ಗಾಂಧಿ ಮೈದಾನದ ಹತ್ತಿರದ 5 ಹೊಟೇಲ್ ಸೈಸ್ ವಾಡಿ ಸಭಾಂಗಣದಲ್ಲಿ ಪನ್ನೇಲ್‌ನ ಜನಪ್ರಿಯ ನಗರ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿ ದಂಪತಿಯ ಸೇವಾ ರೂಪದ ಬಯಲಾಟವಾಗಿ, ತ್ರಿರಂಗ ಸಂಗಮ ಮುಂಬಯಿಯ ಸಂಚಾಲಕತ್ವದಲ್ಲಿ, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗಜ ಕ್ಷೇತ್ರ ಪಾವಂಜೆ ಮೇಳದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ಅಯೋಧ್ಯಾ ದೀಪ’ ಯಕ್ಷಗಾನ ಪ್ರದರ್ಶನದ ಮಧ್ಯೆ ಜರಗಿದ ಸಭಾ ಕಾರ್ಯಕ್ರಮದಲ್ಲಿ ಆಯೋಜಕರು ನೀಡಿದ ಗೌರವ ಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ನಗರ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿ ದಂಪತಿ ವತಿಯಿಂದ ನೀಡಲಾದ ಗೌರವ ಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಹಾಗೇ ಪಟ್ಟ ಸತೀಶ್ ಶೆಟ್ಟಿ, ಸಂತೋಷ್ ಶೆಟ್ಟಿಯವರ ಪತ್ನಿ ಶ್ವೇತಾ ಸಂತೋಷ್ ಶೆಟ್ಟಿ ಸೇರಿದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಶಾಲು ಹೊದಿಸಿ, ಫಲಪುಷ್ಪ ನೆನಪಿನ ಕಾಣಿಕೆಯೊಂದಿಗೆ ಅದರಪೂರ್ವಕವಾಗಿ ಗೌರವಿಸಿ, ಸತ್ಕರಿಸಿದರು.

ಇದೇ ವೇಳೆ ಮೇಳದ ಪ್ರಮುಖ ಕಲಾವಿದರುಗಳಾದ ರಾಧಾಕೃಷ್ಣ ನಾವಡ, ಅಕ್ಷಯ್‌ ಕುಮಾರ್ ಮಾರ್ನಾಡ್, ದಿನೇಶ್ ಶೆಟ್ಟಿ ಟ್ಟಿ ಕಾವಳಕಟ್ಟೆ, ಮಾಧವ ಬಂಗೇರ ಕೆಳಕ್ರಮಜಲ್, ಯಕ್ಷಗುರು ಕಲಾವಿದ ರಾಕೇಶ್ ರೈ ಅಡ್ಕ ಅವರನ್ನು ಶ್ವೇತಾ ಸಂತೋಷ್ ಶೆಟ್ಟಿ ಹೂ ಗುಚ್ಛ ನೀಡಿ ಗೌರವಿಸಿ, ಅಭಿನಂದಿಸಿದರು. ಮೇಳದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿ ಸಹಕರಿಸಿದ ಶ್ವೇತಾ ಸಂತೋಷ್ ಶೆಟ್ಟಿಯವರನ್ನು ಅವರ ತಾಯಿಯವರ ಜೊತೆಗೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹೂ ಗುಚ್ಛ ನೀಡಿ ಗೌರವಿಸಿದರು. ಸಮಾರಂಭದ ವೇದಿಕೆಯಲ್ಲಿ ಆಯೋಜಕರಾದ ಶ್ವೇತಾ ಸಂತೋಷ್ ಶೆಟ್ಟಿ ಜೊತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಸುಜಿತ್ ಕೋಟ್ಯಾನ್, ಅಜಯ್ ಶೆಟ್ಟಿ, ಕರುಣಾಕರ್ ಶೆಟ್ಟಿ, ರಾಜೇಶ್ ಶೆಟ್ಟಿ ವಯ್ಯಾರು, ಶಶಿ ಶೆಟ್ಟಿ, ಪನ್ವೇಲ್, ದಿವಾಕರ್ ಶೆಟ್ಟಿ ಪಸ್ರೇಲ್, ನವೀನ್ ಹೆಗ್ಡೆ ಖಾರ್ಘರ್, ಸದಾನಂದ ಶೆಟ್ಟಿ ಸ್ವಾಮಿ ಹೋಟೇಲ್, ರತ್ನಾಕರ್ ಶೆಟ್ಟಿ ಪನ್ನೇಲ್, ಚೆಲ್ಲಡ್ಕ ಪ್ರಕಾಶ್ ಶೆಟ್ಟಿ, ಸಂಜೀವ ಶೆಟ್ಟಿ ಪಸ್ಟ್ರೇಲ್, ಸುರೇಶ್ ಶೆಟ್ಟಿ ಸಿಬಿಡಿ, ನವೀನ್ ಶೆಟ್ಟಿ, ಸಿಬಿಡಿ, ಶಿವಾಜಿ ಶೆಟ್ಟಿ ಪಸ್ಟ್ರೇಲ್, ಸತೀಶ್ ಶೆಟ್ಟಿ ಕುತ್ಯಾರು, ಸೀತಾರಾಮ ಶೆಟ್ಟಿ ಪಸ್ಟ್ರೇಲ್ ಹಾಗೂ ಶ್ರೀರಂಗ ಸಂಗಮ ಮುಂಬಯಿಯ ಸಂಚಾಲಕ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತು ನವೀನ್ ಶೆಟ್ಟಿ ಇನ್ನ ಬಾಳಿಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕರ್ನೂರು ಮೋಹನ್ ರೈ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ‘ಆಯೋಧ್ಯಾ ದೀಪ’ ಯಕ್ಷಗಾನವನ್ನು ಮುಂದುವರಿಸಲಾಯಿತು.

Leave a Reply

Your email address will not be published. Required fields are marked *