ಯಕ್ಷಗಾನ ಪ್ರಪಂಚ ಕಂಡ ಅಪ್ರತಿಮ ವಿದ್ವಾಂಸ ಶ್ರೀ ಗಣೇಶ್ ಕೊಲೆಕಾಡಿ ಅವರ ಆರೋಗ್ಯದ ತುರ್ತು ಪರಿಸ್ಥಿತಿಯನ್ನು ಮನಗಂಡು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರಿನ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ದಿನಾಂಕ 3-12-2024 ಮಂಗಳವಾರ ಸಂಜೆ ಶ್ರೀಯುತರ ಮನೆಗೆ ಭೇಟಿ ನೀಡಿದರು. ಜೊತೆಗೆ ಶ್ರೀ ಗಣೇಶ್ ಅವರಿಗೆ ಫೌಂಡೇಶನ್ ವತಿಯಿಂದ ರೂಪಾಯಿ 50,000 ನೀಡಲಾಯಿತು.
ಈ ಮೊದಲು ಕೂಡ ಪಟ್ಲ ಫೌಂಡೇಶನ್ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಸಹಕಾರದ ರೂಪದಲ್ಲಿ ನೀಡಿತ್ತು. ಅಷ್ಟೇ ಅಲ್ಲದೆ ಕಳೆದ 6 ವರ್ಷಗಳಿಂದ ಪ್ರತಿ ತಿಂಗಳು ರೂ. 1000 ಚಿಕಿತ್ಸಾ ವೆಚ್ಚವನ್ನು ಭರಿಸುತ್ತಾ ಬರುತ್ತಿದೆ.
ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ್ ಭಂಡಾರಿ, ಕೋಶಾಧಿಕಾರಿ ಶ್ರೀ ಸಿ ಎ ಸುದೇಶ್ ಕುಮಾರ್ ರೈ , ಶ್ರೀ ಕದ್ರಿ ನವನೀತ್ ಶೆಟ್ಟಿ, ಶ್ರೀ ಪ್ರದೀಪ್ ಆಳ್ವ ಕದ್ರಿ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಹಾಗೂ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ವಿಜಯ್ ಕುಮಾರ್ ಮೊಯ್ಲೊಟ್ಟು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿದ್ವಾಂಸ ಶ್ರೀ ಗಣೇಶ್ ಕೊಲೆಕಾಡಿ ಕಳೆದ 18 ವರ್ಷಗಳಿಂದ ತೀರಾ ಅನಾರೋಗ್ಯದಿಂದಿದ್ದು ಅವರ ತಾಯಿಗೂ ಕೂಡ ವಯಸ್ಸಾಗಿದೆ. ಇವರಿಗೆ ಬೇರೆ ಯಾರೂ ಕುಟುಂಬಸ್ಥರು ಇಲ್ಲದ ಕಾರಣ ಮನೆಯಲ್ಲಿ ಊಟಕ್ಕೂ, ಮದ್ದಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಇವರು ಕಲಾ ವಲಯಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ವಿದ್ವಾಂಸರ ಸ್ಥಿತಿ, ಅವರ ತಾಯಿಯ ಸ್ಥಿತಿ ಚಿಂತಾಜನಕವಾಗಿದೆ. ತೀರಾ ಸಂಕಷ್ಟದಲ್ಲಿರುವ ಗಣೇಶ್ ಪೂಜಾರಿ ಕೊಲೆಕಾಡಿ ಕಲಾವಿದನ ಕಷ್ಟಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಪಟ್ಲ ಸತೀಶ್ ಶೆಟ್ಟಿ ಮನವಿ ಮಾಡಿದ್ದಾರೆ.