ಮಂಗಳೂರು: ಯಕ್ಷಧ್ರುವ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆಯ ಯಕ್ಷಧ್ರುವ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಾವೂರಿನಲ್ಲಿ ನಡೆಯಿತು.
ಸಂಘವು ವರ್ಷಾಂತ್ಯಕ್ಕೆ ಎ ದರ್ಜೆಯ ಸದಸ್ಯತ್ವ ಪಾಲು ಬಂಡವಾಳ 46.30 ಲಕ್ಷ ರೂ. ಹೊಂದಿದ್ದು, ಠೇವಣಿ ಸಂಗ್ರಹ 4.54 ಕೋಟಿ ರೂ., 4.56 ಕೋಟಿ ರೂ. ವಿವಿಧ ರೀತಿಯ ಸಾಲ ವಿತರಿಸಲಾಗಿದೆ. 1.17 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರ ಠೇವಣಾತಿಗಳಿಗೆ ಅತ್ಯಾಕರ್ಷಕ ಬಡ್ಡಿ ನೀಡುವುದರೊಂದಿಗೆ ಹಿರಿಯ ನಾಗರಿಕರಿಗೆ ವಿಶೇಷ ರೀತಿಯ ಬಡ್ಡಿ ನೀಡಲಾಗುತ್ತಿದೆ. ಚಿನ್ನಾಭರಣ ಈಡಿನ ಸಾಲ, ಗೃಹ ಸಾಲ, ಅಡವು ಸಾಲ, ಜಾಮೀನು ಸಾಲ, ಭದ್ರತಾ ಸಾಲ, ಎಲ್ಲ ತರಹದ ವಾಹನ ಸಾಲ ನೀಡಲಾಗುತ್ತಿದೆ.
2024-25ನೇ ಸಾಲಿಗೆ ಅಂದಾಜು 10 ಕೋಟಿ ರೂ. ಠೇವಣಿ ಸಂಗ್ರಹ ಮತ್ತು ಸಾಲ ವಿತರಣೆ 8.50 ಕೋಟಿ ರೂ. ನಿವ್ವಳ ಲಾಭ 12.74 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಮಂಗಳೂರು ನಗರದ ಪಂಪ್ವೆಲ್ ಪ್ರದೇಶದಲ್ಲಿ ನೂತನ ಶಾಖೆ ಶೀಘ್ರ ದಲ್ಲೇ ಕಾರ್ಯಾರಂಭ ಆಗಲಿದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸೊಸೈಟಿ ನಿರ್ದೇಶಕ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ಕೆಲಸ ಮಾಡಿರುವುದಲ್ಲದೇ ಇತ್ತೀಚೆಗೆ ಅಮೆರಿಕ ಪ್ರವಾಸ ಸಂದರ್ಭ 2 ರಾಜ್ಯಗಳ ಮೇಯರ್ ಅವರು ಯಕ್ಷಧ್ರುವ ದಿನವನ್ನು ಆಚರಿಸುವ ಘೋಷಣೆ ಮಾಡಿರುವುದು ನಮ್ಮ ತುಳುನಾಡಿನ ಯಕ್ಷಗಾನಕ್ಕೆ ಸಂದ ಗೌರವ. ಸಹಕಾರ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಸಮಾಜಕ್ಕೆ ಸಹಕರಿಸುವುದು ಶ್ಲಾಘನೀಯ ಕೆಲಸವೆಂದು ಪರಿಗಣಿಸಿ ಅವರನ್ನು ಒಕ್ಕೂಟದ ವತಿಯಿಂದ ಸಮ್ಮಾನಿಸಿದರು.
ಸೊಸೈಟಿಯ ನಿರ್ದೇಶಕ ಸವಣೂರು ಸೀತಾರಾಮ ರೈ ಸ್ವಾಗತಿಸಿದರು. ಸಿಇಒ ತನುಜಾ ಜೆ.ಅಡ್ಯಂತಾಯ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ನಿಟ್ಟೆಗುತ್ತು ರವಿರಾಜ ಶೆಟ್ಟಿ ಸುಧಾಕರ ಎಸ್.ಪೂಂಜ, ಸಂತೋಷ್ ಕುಮಾರ್ ಶೆಟ್ಟಿ, ಲೋಕೇಶ್ ಪೂಜಾರಿ ಭರಣಿ, ರವಿಚಂದ್ರ ಶೆಟ್ಟಿ, ಆರತಿ ಆಳ್ವ ನಿರ್ಮಿತಾ ಶೆಟ್ಟಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಅಡ್ಯಾರ್ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಗಿರೀಶ್ ಎಂ.ಶೆಟ್ಟಿ ಕಟೀಲು ವಂದಿಸಿದರು.
[Best_Wordpress_Gallery id=”147″ gal_title=”Yakshadhruva Souharda Co-operative Society Mahasabha”]
