ಮಂಗಳೂರು: ಪಟ್ಲ ಫೌಂಡೇಶನ್ ಆಲದ ಮರ ಇದ್ದಂತೆ. ಕಲಾವಿದರ ಕಷ್ಟವನ್ನು ಅರಿತು ಸಂಘಟನೆ ಅವರನ್ನು ಸಲಹುತ್ತಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಸಾಮಾಜಿಕ ಕಾರ್ಯ ಅದ್ಭುತವಾದದ್ದು. ಅವರ ಬಗ್ಗೆ ತಿಳಿಯುತ್ತಾ ಹೋದಂತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು, ದಾನಿಗಳ ಜೊತೆಗೆ ವೇದಿಕೆ ಹಂಚಿಕೊಳ್ಳಲು ಖುಷಿ ಆಗುತ್ತದೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಜರುಗಿದ ಯಕ್ಷಧ್ರುವ ಪಟ್ಟ ಸಂಭ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ನನ್ನ ಅಮ್ಮ ತುಳು ನಾಡಿನವರೇ ಆಗಿರುವ ಕಾರಣ ನಾನು ಕೂಡ ತುಳುವನೇ. ಆದರೆ ನನಗೆ ತುಳು ಮಾತಾಡಲು ಕಲಿಸಿಲ್ಲ. ನನಗೆ ತಿಳಿದಂತೆ ಮಂಗಳೂರಿನ ಜನರು ಸ್ವಾಭಿಮಾನಿಗಳು. ಇಲ್ಲಿನ ಜನರ ಮನಸ್ಸಲ್ಲಿ ಇಷ್ಟು ಪ್ರೀತಿ ಸಿಕ್ಕಿರುವುದೇ ನನ್ನ ಭಾಗ್ಯ ಎಂದರು. ಹಿರಿಯ ಯಕ್ಷಗಾನ ಕಲಾವಿದೆ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಯಕ್ಷಧ್ರುವ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿ, ಕಲಾವಿದನಾದವ ಪ್ರಶಸ್ತಿಗಾಗಿ ಫೈಲ್ ಹಿಡಿದುಕೊಂಡು ರಾಜಕಾರಣಿಗಳ ಹತ್ರ ಹೋಗುವುದು, ಶಿಫಾರಸ್ಸು ಮಾಡಿಸುವ ಕೆಲಸ ಮಾಡಬಾರದು. ಪ್ರಶಸ್ತಿಗೆ ನಾವು ಯೋಗ್ಯರಾಗಿದ್ದರೆ ಅದು ಹುಡುಕಿಕೊಂಡು ಬರುತ್ತದೆ. ಆಗಮಾತ್ರ ಆ ಪ್ರಶಸ್ತಿಗೆ ಮರ್ಯಾದೆ ಜಾಸ್ತಿ. ಯಕ್ಷಗಾನ ಕಲೆಗೆ ನೀರು, ಗೊಬ್ಬರ ಹಾಕಿ ಬೆಳೆಸಿದವರು ಹಳೆಯ ತಲೆಮಾರಿನವರು. ಈಗ ಆ ಕೆಲಸವನ್ನು ಪಟ್ಲ ಫೌಂಡೇಶನ್ ಮಾಡುತ್ತಾ ಬಂದಿದೆ. ಇಂತಹ ಸಂಘಟನೆ ನೂರುಕಾಲ ಬಾಳಲಿ ಎಂದರು.
ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಪಟ್ಟ ಫೌಂಡೇಶನ್ ಗೌರವಾಧ್ಯಕ್ಷ ಹೇರಂಭ ಕೆಮಿಕಲ್ ಇಂಡಸ್ಟ್ರೀಸ್ ಮುಂಬೈ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಕೆ.ಕೆ. ಶೆಟ್ಟಿ ಫಾರ್ಚುನ್ ಗ್ರೂಫ್ ಮಾಲೀಕ ವಕ್ವಾಡಿ ಪ್ರವೀಣ್ ಶೆಟ್ಟಿ, ಗೋಪಾಲ ಶೆಟ್ಟಿ, ರಘು ಎಲ್. ಶೆಟ್ಟಿ ತಲ್ಲೂರು ಶಿವರಾಮ್ ಶೆಟ್ಟಿ, ಸಂತೋಷ್ ಕುಮಾರ್ ರೈ, ಕನ್ಯಾನ ರಘುರಾಮ ಶೆಟ್ಟಿ, ಹರೀಶ್ ಶೇರಿಗಾರ್, ಆನಂದ್ ಸಿ. ಕುಂದರ್, ಕೃಷ್ಣಮೂರ್ತಿ ಮಂಜ, ಎನ್.ಟಿ. ಪೂಜಾರಿ, ಅಮರಾನಾಥ ಎಸ್.ಎಸ್. ಭಂಡಾರಿ, ಸುಧಾಕರ್ ಶೆಟ್ಟಿ ಸುಗ್ಗಿ, ಅಶೋಕ್ ಶೆಟ್ಟಿ ಬೆಳ್ಳಾಡಿ, ಉಳಿ ಯೋಗೀಂದ್ರ ಭಟ್ ಯುಎಸ್ ಎ, ಆಶಾ ಆನಂದ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ ಉಳ್ಳೂರು, ಅಜಿತ್ ಶೆಟ್ಟಿ ಅಂಕಲೇಶ್ವರ, ಗಿರೀಶ್ ಶೆಟ್ಟಿ ಕಟೀಲು, ಪಟ್ಟ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ, ಸಿ ಸುದೇಶ್ ಕುಮಾರ್ ರೈ, ಅಶೋಕ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ, ಡಾ. ಮನು ರಾವ್, ದುರ್ಗಾ ಪ್ರಕಾಶ್ ಪಡುಬಿದ್ರೆ, ಜಗನ್ನಾಥ ಶೆಟ್ಟಿ ಬಾಳ, ರಾಜೀವ ಪೂಜಾರಿ ಕೈಕಂಬ ಇದ್ದರು.