ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಯಕ್ಷ ಶಿಕ್ಷಣ ಯೋಜನೆಯ ಅಡಿಯಲ್ಲಿ ಸರಕಾರಿ ಪ್ರೌಢ ಶಾಲೆ, ಮೀನಕಳಿಯ ಬೈಕಂಪಾಡಿಯಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿ ಉದ್ಘಾಟನೆಗೊಂಡಿತು. ಶ್ಯಾಮ ಕನ್ ಸ್ಟ್ರಕ್ಷನ್ಸ್ ನ ಇಂಜಿನಿಯರ್ ಪ್ರಸಿದ್ಧ ಪಿ. ಕಾರ್ಯಕ್ರಮ ಉದ್ಘಾಟಿಸಿ, ಯಕ್ಷಗಾನ ಎಲ್ಲಾ ಪ್ರಕಾರಗಳಲ್ಲಿಯೂ ಜ್ಞಾನ ವೃದ್ಧಿಗೆ ಪ್ರಯೋಜನ ವಾಗುತ್ತದೆ, ಯಕ್ಷಗಾನ ಬರೇ ಕಲೆಗೋಸ್ಕರ ಕಲಿಯುವುದಲ್ಲ, ನಮ್ಮ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗಲು ಸದವಕಾಶ ಎಂದು ಅವರು ತಿಳಿಸಿದರು.
ಯಕ್ಷ ಶಿಕ್ಷಣ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ (USA) ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿ ಶಿವರಾಮ ಪಣಂಬೂರು ಇವರು ಮಾತನಾಡುತ್ತ ಶುದ್ಧ ಕನ್ನಡ ಇಂದಿಗೂ ಉಳಿದಿದೆ ಎಂದಾದರೆ ಅದು ಯಕ್ಷಗಾನದಿಂದ ಮಾತ್ರ, ಅಲ್ಲದೆ ಗುರು ಹಿರಿಯರನ್ನು ಗೌರವದಿಂದ ಕಾಣಲು ಇಂತಹ ಯಕ್ಷ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಮಾತನಾಡಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವಲ್ಲಿ ಯಕ್ಷಗಾನ ಕಲೆ ಮಹತ್ತರ ಪಾತ್ರವನ್ನು ವಹಿಸುತ್ತದೆ, ದೇಶ ವಿದೇಶಗಳಲ್ಲಿ ಯೂ ಕಲಾಗಾರರನ್ನು ಪ್ರೇರೇಪಿಸುವ ಜೊತೆಗೆ ನೂರಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಪಟ್ಲ ಫೌಂಡೇಶನ್ ಸಂಸ್ಥೆಯ ಕಾರ್ಯವನ್ನು ಶ್ಲಾಗಿಸಿದರು.
ಅಧ್ಯಕ್ಷತೆ ವಹಿದಿದ್ದ ಘಟಕದ ಅಧ್ಯಕ್ಷ ಸುಧಾಕರ ಎಸ್ ಪೂಂಜ ಮಾತನಾಡಿ ಯಕ್ಷಗಾನ ಕಲೆ ಮುಂದಿನ ಪೀಳಿಗೆಯ ಮುಖಾಂತರ ಶಾಶ್ವತವಾಗಿ ಯಕ್ಷ ಕಲೆ ಬೆಳೆಯಬೇಕೆಂಬ ಉದ್ದೇಶ ನಮ್ಮದು. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಯಕ್ಷಗಾನವನ್ನು ವೇದಿಕೆಯಲ್ಲಿ ಪ್ರದರ್ಶಿಸುವಂತಾಗಲಿ ಎಂದು ಶುಭ ಹಾರೈಸಿದರು.
ಘಟಕದ ಸಂಚಾಲಕ ವಿನಯ ಆಚಾರ್ ಹೊಸಬೆಟ್ಟು, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ, ಕೋಶಾಧಿಕಾರಿ ಟಿ.ಎನ್. ರಮೇಶ್, ಉಪಾಧ್ಯಕ್ಷರಾದ ಲೀಲಾಧರ ಶೆಟ್ಟಿ ಕಟ್ಲ, ಫೌಂಡೇಶನ್ ಟ್ರಸ್ಟಿಗಳು ಪುಷ್ಷರಾಜ್ ಶೆಟ್ಟಿ, ಕುಡುಂಬೂರು, ಶ್ರೀಮತಿ ಸಹನಾ ರಾಜೇಶ್ ರೈ, ಶೈಲಾ ಶಂಕರ್ ಶೆಟ್ಟಿ, ಬಾಳ ಸವಿತಾ ಭವಾನಿಶಂಕರ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಬಾಳಿಕೆ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.
ಯಕ್ಷಗುರು ಪೂರ್ಣಿಮಾ ಯತೀಶ್ ರೈ ಯಕ್ಷಗಾನ ಕಲೆಯ ಬಗ್ಗೆ ಮಾಹಿತಿಗಳನ್ನು ನೀಡುವುದರ ಜೊತೆಗೆ ಪ್ರಾರಂಭಿಕ ನಾಟ್ಯ ತರಬೇತಿಯನ್ನು ಆರಂಭಿಸಿದರು. ಉಸ್ತುವಾರಿ ಶಿಕ್ಷಕ ನಿರಂಜನ ನಾಯಕ ಸ್ವಾಗತಿಸಿದರು. ಸಹ ಶಿಕ್ಷಕಿ ಗಾಯತ್ರಿ ವಂದಿಸಿದರು. ಸಹ ಶಿಕ್ಷಕ ಪ್ರೇಮನಾಥ ಕಾರ್ಯಕ್ರಮ ನಿರ್ವಹಿಸಿದರು.