ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆಸುವ ಯಕ್ಷಧ್ರುವ-ಯಕ್ಷಶಿಕ್ಷಣ ಯಕ್ಷಗಾನ ನಾಟ್ಯ ತರಬೇತಿ ಅಭಿಯಾನದ ತರಬೇತಿ ತರಗತಿ ಫೌಂಡೇಶನ್ ನ ಸರಪಾಡಿ ಘಟಕದ ಸಹಕಾರದಲ್ಲಿ ಸರಪಾಡಿ ಸ.ಪ್ರೌ.ಶಾಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಯಕ್ಷಧ್ರುವ ಪಟ್ಲ ಫೌಂಡೇ ಶನ್ ಸರಪಾಡಿ ಘಟಕದ ಸಂಚಾಲಕರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಗಂಡು ಕಲೆಯೆಂದು ಬಿಂಬಿತವಾದ ಯಕ್ಷಗಾನದ ಕಲಿಕೆ ಎನ್ನುವುದು ಸ್ವಪ್ರಯತ್ನದಿಂದ, ಪರಿಶ್ರಮದಿಂದ ಬರುತ್ತದೆ. ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಸರಪಾಡಿ ಘಟಕದ ಅಧ್ಯಕ್ಷ ಶಶಿಕಾಂತ ಶೆಟ್ಟಿ ಆರುಮುಡಿ, ಕಾವ್ಯದರ್ಶಿ ಧನಂಜಯ ಶೆಟ್ಟಿ ಸರಪಾಡಿ, ಶಾಲಾ ಮುಖ್ಯ ಶಿಕ್ಷಕ ಆದಂ, ಪ್ರಮುಖರಾದ ಕುಸುಮಾಕರ ಶೆಟ್ಟಿ ಯಾಕೂಬ್, ಜಗದೀಶ್, ಇಸ್ಮಾಯಿಲ್, ಸುನೀತಾ, ಯಕ್ಷಗಾನ ತರಗತಿಯ ನೋಡಲ್ ಶಿಕ್ಷಕ ಅಖಿಲ್ ಶೆಟ್ಟಿ ಶಿಕ್ಷಕಿಯರಾದ ಅಕ್ಷತಾ, ಪವಿತ್ರಾ ಮತ್ತಿತರರಿದ್ದರು.
ಯಕ್ಷಶಿಕ್ಷಣದ ಯಕ್ಷಗುರು ನರಸಿಂಹ ಮಯ್ಯ ಅಲೆತ್ತೂರು ಅವರು ನಾಟ್ಯ ತರಬೇತಿಗೆ ಚಾಲನೆ ನೀಡಿದರು. ಶಿಕ್ಷಕಿ ವನಿತಾ ಸ್ವಾಗತಿಸಿ, ವಂದಿಸಿದರು. ಕಿಶೋರಿ ಕಾರ್ಯಕ್ರಮ ನಿರೂಪಿಸಿದರು.